ಎಮ್.ಕೆ. ಹುಬ್ಬಳ್ಳಿ ಫೆ.11: ದಾಸ್ತಿಕೊಪ್ಪ ಸರಕಾರಿ ಹಿರಿಯ ಕನ್ನಡ ಶಾಲೆಯಲ್ಲಿ ಇಂದು ಎಮ್.ಕೆ. ಹುಬ್ಬಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವು ವಿಜೃಂಭಣೆಯಿಂದ ಜರುಗಿತು. ಈ ಕಲಿಕಾ ಹಬ್ಬದ ಅಂಗವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ ಪಾಲಕ ಪೋಷಕರು ಹಾಗೂ ಮಕ್ಕಳನ್ನು ಡೊಳ್ಳು ಬಾರಿಸಿ ಭವ್ಯ ಸ್ವಾಗತ ನೀಡಲಾಯಿತು.
ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಾಯ್. ತುಬಾಕದ ಹಾಗೂ ವೇದಿಕೆಯ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.ಶಿಕ್ಷಕ ಎಮ್.ಎಸ್. ಕಲ್ಮಠ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಶಿಕ್ಷಣ ಸಂಯೋಜಕರಾದ ಎಸ್.ಎಮ್. ಶಹಪೂಮಠ ಕಾರ್ಯಕ್ರಮದ ರೂಪರೇಷೆಯನ್ನು ವಿವರಿಸಿದರು. ನಂತರ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಾಯ್. ತುಬಾಕದ, ಕಲಿಕಾ ಹಿಂದುಳಿದ ಮಕ್ಕಳಿಗಾಗಿ ಇಲಾಖೆಯು ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ಅವರು, ತಾಲೂಕಿನ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಕಟಿಬದ್ಧರಾಗೋಣ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಿಕ್ಷಣ ಸಂಯೋಜಕರಾದ ಎಮ್.ವಾಯ್. ಕಡಕೋಳ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ತಿಗಡಿ, ಎಸ್.ಡಿ.ಎಮ್.ಸಿ ಅಧ್ಯಕ್ಷರು ತುಕಾರಾಮ ಸಿದ್ರಾಮಣಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ವಿವಿಧ ಶಾಲೆಗಳ ಪಾಲಕ-ಪೋಷಕರು, ಮಕ್ಕಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಹರ್ಷಭರಿತವಾಗಿ ಪಾಲ್ಗೊಂಡರು.
ಶಾಲೆಯ ಪ್ರಧಾನ ಗುರು ಕೆ.ಡಿ. ಹೊಳಿ, ಸಿ.ಆರ್.ಪಿ. ವಿನೋದ ಪಾಟೀಲ, ಕೆ.ಜಿ. ಗಡಾದ, ಸಿದ್ದಯ್ಯ ಹಿರೇಮಠ, ಮಂಜುನಾಥ ಶೆಟ್ಟನ್ನವರ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸಲ್ಮಾ ಮುಲ್ಲಾ ನಡೆಸಿದರು, ಹಾಗೂ ವಂದನೆಯನ್ನು ಜಿ.ಬಿ. ಜುಟ್ಟನ್ನವರ ಸಲ್ಲಿಸಿದರು.