
ಬೆಂಗಳೂರು, ನವೆಂಬರ್ 18: ಕನಕದಾಸರ ಜಯಂತಿ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ “ಕರ್ನಾಟಕ ತತ್ವಪದಕಾರರ ಹದಿನೆಂಟು ಸಂಪುಟಗಳ ಬಿಡುಗಡೆ ಸಮಾರಂಭ’ ಕಾರ್ಯಕ್ರಮದಲ್ಲಿ ದಲಿತ ಸಾಹಿತಿಯನ್ನು ಅವಮಾನಿಸಿದ ಘಟನೆ ನಡೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ ಹದಿನೆಂಟು ಸಂಪುಟಗಳಲ್ಲಿ ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ದಲಿತ ಸಾಹಿತಿ ಗಂಗಪ್ಪ ತಳವಾರ ಅವರು ಮೂಲ “ಗುಟ್ಟಹಳ್ಳಿ ಆಂಜನಪ್ಪ” ಬರೆದಿರುವ ಕೃತಿಯನ್ನು ಕನ್ನಡಕ್ಕೆ ಭಾವಾನುವಾದ ಮಾಡಿರುವ “ಸುಜ್ಞಾನ ಭೋದ ತತ್ವಗಳು ಸಂಪುಟ” ಎಂಬ ಸಂಪುಟವೂ ಸೇರಿತ್ತು.
ಎಲ್ಲ ಹದಿನೆಂಟು ಲೇಖಕರನ್ನು ಒಳಗೊಂಡಂತೆ ಹಲವಾರು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ‘ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ’ ದ ಸಮನ್ವಯಾಧಿಕಾರಿ ಕಾ.ತ ಚಿಕ್ಕಣ್ಣ ಅವರ ಯಡವಟ್ಟಿನಿಂದಾಗಿ ಸೌಜನ್ಯಕ್ಕೂ ಅನುವಾದಿತ ಕೃತಿಯ ಲೇಖಕರ ಹೆಸರನ್ನು ಹೆಸರಿಸದೇ ಪುಸ್ತಕ ಬಿಡುಗಡೆ ಮಾಡಿದ್ದು ಲೇಖಕರಿಗೆ ಮಾಡಿದ ದೊಡ್ಡ ಅವಮಾನ ಎಂದು ಗಂಗಪ್ಪ ತಳವಾರ ಅಸಮಾಧಾನ ಹೊರಹಾಕಿದ್ದಾರೆ.

ಜನಪರ ಮುಖ್ಯಮಂತ್ರಿಗಳ ಎದುರಲ್ಲೇ ಈ ರೀತಿಯಾಗಿ ದಲಿತ ಲೇಖಕರನ್ನು ಅವಮಾನಿಸಿರುವುದು ನಿಜಕ್ಕೂ ಖಂಡನೀಯ. ಈ ಹಿಂದಿನಿಂದಲೂ ದಲಿತ ಲೇಖಕರನ್ನು ದ್ವಿತೀಯ ದರ್ಜೆಯಲ್ಲಿಯೇ ನೋಡುತ್ತಿರುವುದು ದಲಿತ ಸಾಹಿತ್ಯಕ್ಕೆ ಮಾಡುತ್ತಿರುವ ಅಪಮಾನ. ಬಿಡುಗಡೆ ಸಮಾರಂಭಕ್ಕೆ ಕುಟುಂಬ ಸಹಿತ ಆಗಮಿಸಿದ ದಲಿತ ಲೇಖಕರಿಗೆ ಮುಜುಗುರ ಉಂಟಾಗಿದ್ದು ಇದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ ಎನ್ನಲಾಗುತ್ತಿದೆ.
ಕೇಂದ್ರ ಕಚೇರಿಯಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿಈ ರೀತಿ ಅವಮಾನಿಸಿದ್ದು ದಲಿತ ಬರಹಗಾರರಿಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಕನಿಷ್ಠ ಸೌಜನ್ಯವನ್ನು ಲೇಖಕರಿಗೆ ತೋರಿಸದೇ ಪುಸ್ತಕ ಬಿಡುಗಡೆ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.