
ಬೆಂಗಳೂರು, ನವೆಂಬರ್ 13 : ಕನ್ನಡದ ಪ್ರಮುಖ ಪ್ರಕಾಶನವಾದ ʼವೀರಲೋಕʼದ ವತಿಯಿಂದ ಎರಡನೇ ವರ್ಷದ ʼಪುಸ್ತಕ ಸಂತೆʼ ನವೆಂಬರ್ 15, 16 ಹಾಗೂ 17ರಂದು ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ.
ನೂರಾರು ಲೇಖಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ಹತ್ತಾರು ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ವೀರಲೋಕದ ರೂವಾರಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಕನ್ನಡ ಪುಸ್ತಕಗಳು ಎಲ್ಲೆಂದರಲ್ಲಿ ಸಿಗಬೇಕು, ಕನ್ನಡಿಗರು ಇರುವ ಕಡೆಯೇ ಪುಸ್ತಕಗಳು ಸಿಗಬೇಕು. ಕನ್ನಡ ಪುಸ್ತಕಗಳು ಕನ್ನಡಿಗರ ಬದುಕಿನ ಭಾಗವಾಗಬೇಕು ಎಂಬ ಆಶಯಗಳೊಂದಿಗೆ ವೀರಲೋಕ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.

ಅಂಥದ್ದೇ ಒಂದು ಪ್ರಯತ್ನ ಪುಸ್ತಕ ಸಂತೆ. ಕಳೆದ ವರ್ಷ ನಡೆದ ಪುಸ್ತಕ ಸಂತೆಯ ಮೊದಲ ಆವೃತ್ತಿ ಭಾರೀ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷವೂ ಪ್ರಕಾಶಕರು, ಲೇಖಕರು ಹಾಗೂ ಓದುಗರನ್ನು ಒಟ್ಟುಗೂಡಿಸುವ ಹಬ್ಬಕ್ಕೆ ವೀರಲೋಕ ಮುಂದಾಗಿದೆ.