
ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಸಿದ್ದೇಶ್ವರರ ಮಹಾರಥೋತ್ಸವ 8 ಲಕ್ಷ ಜನ ಭಕ್ತ ಸಾಗರದ ಮಧ್ಯೆ ಬುಧವಾರ ಸಂಜೆ ಪುಷ್ಯ ಮಾಸದ ಬಹುಳ ಬಿದಿಗೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಹಿಂದೂಸ್ಥಾನಿ ಸಂಗೀತದ ಮೇರು ಪರ್ವತ ಪಂಡಿತ, ಪದ್ಮಶ್ರೀ ಪುರಸ್ಕೃತ ಎಂ.ವೆಂಕಟೇಶ್ ಕುಮಾರ್ ಅವರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಪ್ರತಿಯೊಬ್ಬ ಮನುಷ್ಯನಿಗೆ ದೇವರು ಒಂದು ಸುಂದರ ಜೀವನ ನೀಡಿದ್ದಾನೆ. ಅದು ಈ ನಿಸರ್ಗದ ದೊಡ್ಡ ಕೊಡುಗೆ. ಆ ಕೊಡುಗೆಯನ್ನು ನಾವೆಲ್ಲರೂ ಜೋಪಾನವಾಗಿ ಕಾಯ್ದಕೊಳ್ಳಬೇಕು. ಹೆಂಗ ಕಾಯ್ದಕೊಳ್ಳಬೇಕು ಅಂದ್ರೆ ಆ ದೇವರೇ ನಿಮ್ಮ ಬದುಕು ನೋಡಿ ಸಂತೋಷಪಡಬೇಕು, ಹಂಗ ಪ್ರತಿಯೊಬ್ಬರೂ ಬದುಕುಬೇಕು ಎಂದರು.
ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಪಂಡಿತ ಪದ್ಮಶ್ರೀ ಎಂ. ವೆಂಕಟೇಶ್ ಕುಮಾರ್ ಅವರು ಧಾರವಾಡದವರು. ಕಡು ಬಡತನದಲ್ಲಿ ಬೆಳೆದವರು. ಶಾಲೆಯೇ ಇಲ್ಲದ ಊರಲ್ಲಿ ಹುಟ್ಟಿದವರು. ನಮ್ಮ ಗವಿಸಿದ್ದೇಶ್ವರ ಹೈಸ್ಕೂಲಿನಲ್ಲಿ 10ನೇ ತರಗತಿ ಓದಿದ್ದಾರೆ. ಇಂದು ದೇಶವೇ ಅವರಿಗೆ ಪದ್ಮಶ್ರೀ ಪದವಿ ಕೊಟ್ಟು ಗೌರವಿಸಿದೆ. ಅಂತಹ ಸಾಧನೆಯನ್ನ ತಾವೆಲ್ಲ ಮಾಡಿ. ಜೇಬು ಖಾಲಿ ಇದ್ದಾಗಲೇ ಬದುಕಿನ ನೋರು ಪಾಠ ಕಲಿಯಲು ಸಾಧ್ಯ. ಇಲ್ಲಿ ಸೇರಿರುವ ತಾವೆಲ್ಲರೂ ಸಾವಧಾನ, ಸಮಾಧಾನದಿಂದ ನಿಮ್ಮ ನಿಮ್ಮ ಮನೆಗಳನ್ನ ಸೇರಿದಾಗ ಮಾತ್ರ ಗವಿಸಿದ್ದೇಶ್ವರ ಜಾತ್ರೆ ಸಂಪನ್ನ. ಮುಂದಿನ ಜಾತ್ರೆಗೆ ತಪ್ಪದೇ ಬನ್ನಿ. ಈ ಮೂಲಕ ಈಗಲೇ ತಮ್ಮೆಲ್ಲರನ್ನ ಆಮಂತ್ರಿಸುತ್ತಿರುವೆ ಎಂದು ಅಭಿನವ ಶ್ರೀಗಳು ಹೇಳಿದರು.