ಬೆಂಗಳೂರು: 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ನಟ ಸುದೀಪ್ ಹಾಗೂ ನಟಿ ಅನುಪಮ ಗೌಡ ಕ್ರಮವಾಗಿ ಅತ್ಯುತ್ತಮ ನಟ, ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪೈಲ್ವಾನ್’ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಸುದೀಪ್ ಗೆ ಈ ಪ್ರಶಸ್ತಿ ಬಂದಿದೆ.
ಇನ್ನೂ ಥ್ರಿಲ್ಲರ್ ಚಿತ್ರ ‘ತ್ರಯಂಬಕಂನ ‘ ಅಮೋಘ ನಟನೆಗಾಗಿ ಅನುಪಮ ಗೌಡ ‘ಅತ್ಯುತ್ತಮ ನಟಿ’ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರ ‘ಮೋಹನದಾಸ’ ಮೊದಲ ಅತ್ಯುತ್ತಮ ಚಿತ್ರವಾಗಿದ್ದು, ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೆಲ್, ಅಘ್ಯಂ ಕ್ರಮವಾಗಿ ಎರಡನೇ ಹಾಗೂ ಮೂರನೇ ಅತ್ಯುತ್ತಮ ಚಿತ್ರವಾಗಿವೆ.
ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್ಟೆಲ್’ ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಬಂದಿದೆ.
ಇದೇ ಚಿತ್ರದ ರಘು ದೀಕ್ಷಿತ್ ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಒಲಿದು ಬಂದಿದೆ.
ಇನ್ನೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಕ ಇಂಡಿಯಾ vs ಇಂಗ್ಲೆಂಡ್ ಅತ್ಯುತ್ತಮ ಜನಪ್ರಿಯ ಮನೋರಂಜನಾ ಚಿತ್ರವಾಗಿದೆ.
ಕನ್ನೇರಿ ಅತ್ಯುತ್ತಮ ಸಾಮಾಜಿಕ ಕಾಳಜಿಯ ಚಿತ್ರವಾಗಿದೆ. ದರ್ಶನ್ ಅಭಿನಯದ ಯಜಮಾನ ಚಿತ್ರದ ಸಂಗೀತ ಸಂಯೋಜನೆಗೆ ವಿ. ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.