ಬೆಳಗಾವಿ, ಫೆಬ್ರವರಿ 24: ಜಾಗತಿಕರಣದ ಪರಿಣಾಮ ಮನುಷ್ಯ ಹಣ ಸಂಪಾದನೆ ಮತ್ತು ಸ್ವಾರ್ಥ ಸಾಧನೆಗೆ ಸ್ಪರ್ಧೆಗೆ ಇಳಿದಿದ್ದಾನೆ. ಹೀಗಾಗಿ ಮನುಷ್ಯ ಸಂಬಂಧದ ಮೌಲ್ಯಕ್ಕಿಂತ ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದಾನೆ. ಇದರ ಪರಿಣಾಮ ಸಾಮಾಜಿಕವಾಗಿ ಸಾಂಪ್ರದಾಯಿಕ ಜಾತಿಯತೆಯ ಅಸ್ಪೃಶ್ಯತೆಗೆ ಮನುಷ್ಯ ಸಂಬಂಧಗಳ ನಂಬಿಕೆಗಳಲ್ಲಿ ಅಸ್ಪೃಶ್ಯತೆ ನಿರ್ಮಾಣಗೊಂಡಿದೆ ಎಂದು ಚಿಂತಕ, ಹೋರಾಟಗಾರ ಹೊಸತು ಪತ್ರಿಕೆಯ ಸಂಪಾದಕರಾದ ಸಿದ್ಧನಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಆಶ್ರಯದಲ್ಲಿ ಶುಕ್ರವಾರ ಫೆಬ್ರವರಿ 21 ರಂದು ಜರುಗಿದ ಕಥೆಗಾರ ಸಿದ್ಧರಾಮ ತಳವಾರ ಅವರು ಬರೆದ ‘ ಕೇರಿ ಹುಡುಗನ ಕತೆಗಳು’ ಕಥಾ ಸಂಕಲನವನ್ನು ಸಂವಿಧಾನದ ಪೀಠಿಕೆ ಓದುವುದರ ಮೂಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಈ ಮೊದಲಿನ ಜಾತಿಯತೆ, ಅಸ್ಪೃಶ್ಯತೆ ಆಚರಣೆ ಪರಸ್ಪರ ಮನುಷ್ಯನನ್ನು ಮುಟ್ಟದೆ ದೂರ ಇಡಲಾಗಿತ್ತು. ಇಂದು ಪರಸ್ಪರ ಕೂಡಿಯೇ ಇದ್ದು, ಕೂಡಿಯೇ ಆಹಾರ ಸೇವೆಸಿದರೂ ಸ್ವಾರ್ಥ ಸಾಧನೆಯ ಕಾರಣ ತನಗೆ ಮಾತ್ರ ಎಲ್ಲವೂ ದಕ್ಕಬೇಕು. ಜೊತೆಗಿದ್ದವನಿಗೆ ದೊರೆಯಬಾರದು ಎಂಬ ದ್ವೇಷ ಭಾವನೆ ಪ್ರಧಾನ ಪಾತ್ರ ವಹಿಸುತ್ತಿರುವದರಿಂದ ಮನುಷ್ಯ ಸಂಬಂಧದ ನಂಬಿಕೆಯಲ್ಲಿ ಜಾತಿಯತೆ ಅಸ್ಪೃಶ್ಯತೆ ಚಾಲ್ತಿಯಲ್ಲಿದೆ. ಮನುಷ್ಯನ ಈ ವರ್ತನೆಯ ಸುತ್ತ ಸಂಭವಿಸುತ್ತಿರುವ ಘಟನೆ, ಸಂಗತಿಗಳಿಗೆ ಸಾಹಿತ್ಯ ರಚನೆಯಾಗಬೇಕಾದ ಅವಶ್ಯವಿದೆ ಎಂದರು.
ಶೋಷಿತ ಸಮುದಾಯದ ಸ್ವಾವಲಂಬನೆ ಸ್ವಾಭಿಮಾನ ಕೇಂದ್ರಿತ 60 -70 ರ ಕಾಲಘಟ್ಟದ ಬದುಕಿನ ಸಂಬಂಧಗಳ ಸುತ್ತ ತಾತ್ವಿಕ ಗೊಂದಲಗಳಿಲ್ಲದ ಸಿದ್ದರಾಮ ತಳವಾರ ಅವರು ಸರಳವಾಗಿ ಕತೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿ ಸಾಧಿಸಿದ್ದಾರೆ ಎಂದು ಸಿದ್ಧನಗೌಡ ಪಾಟೀಲ ಹೇಳಿದ್ದಾರೆ.
ಕೃತಿ ಪರಿಚಯಿಸಿದ ಲೇಖಕ ಇಸ್ಮಾಯಿಲ್ ತಳಕಲ್ ಅವರು, ಸಿದ್ಧರಾಮ ಅವರ ಕಥಾ ಸಂಕಲನ ಪ್ರೇಮ, ಕಾಮ ಮತ್ತ ಸಾವು ಸಂಗತಿಗಳನ್ನು ಕೇಂದ್ರೀಕರಿಸಿ ರಚನೆಗೊಂಡಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಚಿಂತಕ, ಬಸವರಾಜ್ ಕಟ್ಟಮನಿ ಟ್ರಸ್ಟ್ ನ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ, ಹೊಸ ತಲೆಮಾರಿನ ಬರಹಗಾರರೊಂದಿಗೆ ಸಾಹಿತ್ಯಿಕ ಸಂವೇದನೆ ಸೂಕ್ತ ಸಮಾಲೋಚನೆಯ ವೇದಿಕೆಯ ರಚನೆ ತುರ್ತು ಅಗತ್ಯವಿದೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಪ್ರೊ. ದೇಮಣ್ಣ ಸೊಗಲದ ಸ್ವಾಗತಿಸಿದರು. ನದಿಮ ಸನದಿ ಕಾರ್ಯಕ್ರಮ ನಿರ್ವಹಿಸಿದರು. ಗೌತಮ ಮಾಳಗಿ ಅವರು ವಂದಿಸಿದರು.