
ಇಂದು ಸೊನ್ನಲಿಗೆ ಸಿದ್ಧರಾಮನ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ನೆಪದಲ್ಲಿ ಸಿದ್ಧರಾಮನನ್ನು ಚೂರು ನೆನೆಯೋಣ. ಈತನಕ 1965 ವಚನಗಳು ಲಭ್ಯವಾಗಿವೆ. ಸೊನ್ನಲಿಗೆ ಸಿದ್ಧರಾಮನ ಬಗೆಗೆ ಹಲವು ಅಧ್ಯಯನಗಳು ನಡೆದಿವೆ. ಕಾಯಕಜೀವಿಯಾದ ಈತ 12 ನೇ ಶತಮಾನದಲ್ಲಿ ಶರಣರ ಬಳಗದಲ್ಲಿ ಇದ್ದಾತ.
ಈತನನ್ನು ಸಿದ್ದರಾಮ, ಸಿದ್ದರಾಮೇಶ್ವರ ಎಂದು ಕರೆಯಲಾಗುತ್ತಿದೆ. ಕೆರೆಕಟ್ಟೆ, ಬಾವಿ,ಅರವಟ್ಟಿಗೆ ತೋಡುವ ಕಾಯಕ ಮಾಡುತ್ತಲೇ ಸುತ್ತಲ ಸಮಾಜವನ್ನು ನೋಡಿ ಅನುಭವದಿಂದ ಕೆಲವು ಮಾತುಗಳನ್ನು ಆಡಿದ. ಆ ಮಾತುಗಳೆ ವಚನಗಳಾಗಿವೆ. ಸೊನ್ನಲಿಗೆ ಅಥವಾ ಸೊನ್ನಲಾಪುರದ ಪರಿಸರದಲ್ಲಿ ಜೀವಿಸಿದ್ದ ಬಗ್ಗೆ ಆತನ ವಚನಗಳಿಂದ ತಿಳಿಯುತ್ತದೆ.
ಕಪಿಲಸಿದ್ಧಮಲ್ಲಿಕಾರ್ಜುನಾ / ಕಪಿಲಸಿದ್ಧಮಲ್ಲಿಕಾರ್ಜನಲಿಂಗ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಸೊನ್ನಲಿಗೆ ಸಿದ್ಧರಾಮ ನಡೆ-ನುಡಿ ಒಂದಾಗಿರಬೇಕು ಎನ್ನುವ ಬಗ್ಗೆಯೇ ಹಲವು ವಚನಗಳನ್ನು ಬರೆದಿದ್ದಾನೆ.
ಕೆಲವು ವಚನಗಳನ್ನು ನೋಡುವುದಾದರೆ:
ನಡೆನುಡಿಗಳೊಂದಾದವರಿಗೊಲಿವೆ ಕಂಡಯ್ಯಾ ನುಡಿಯೆ ಬ್ರಹ್ಮವಾದವರ ನೀನೊಲ್ಲೆಯಯ್ಯ ಮೃಡನೆ, ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನುಡಿಯ ಬ್ರಹ್ಮಂಗಳಿಂದಪ್ಪುದೇನೊ
ಜನರನ್ನು ಮರಳುಗೊಳಿಸುವ ಮಾತುಗಳಿಂದ ಯಾವ ಪ್ರಯೋಜನವೂ ಇಲ್ಲ. ವಾದದಲ್ಲಿ ಗೆಲ್ಲಬೇಕೆಂಬ ತರ್ಕದ ಮಾತುಗಳಿಂದಲೂ ಪ್ರಯೋಜನವಿಲ್ಲ.ಬರಿ ಒಣ ಮಾತುಗಳಿಂದ ಜನರ ಮನ ಗೆಲ್ಲಲು ಪ್ರಯತ್ನಿಸದೆ ತಾನು ಆಡುವ ಮಾತುಗಳಂತೆ ನಡೆಯಬೇಕು. ನುಡಿದಂತೆ ನಡೆಯಬೇಕು ಎಂದು ಸಿದ್ಧರಾಮ ಹೇಳುತ್ತಾನೆ.
ವೇಷದಲ್ಲಿ ಭಕ್ತನಾದಡೇನು ವೇಷದಲ್ಲಿ ಮಹೇಶನಾದಡೇನು ಗುಣವಿಲ್ಲದನ್ನಕ್ಕರ ಕ್ಷೀರಕ್ಕೂ ತಕ್ರಕ್ಕೂ ಭೇದವೇನುಂಟು ರುಚಿಯಿಂದಲ್ಲದೆ ರೂಪದಿಂದವೆ ಕಪಿಲಸಿದ್ಧ ಮಲ್ಲಿಕಾರ್ಜುನಾ.
ಮೊಸರು (ತಕ್ರ) ಹಾಲು (ಕ್ಷೀರ) ನೋಡುವುದಕ್ಕೆ ಎರಡೂ ಬೆಳ್ಳಗೆ ಕಾಣುತ್ತವೆ. ಆದರೆ ಅವುಗಳ ವ್ಯತ್ಯಾಸ ಕಾಣುವುದು ಅವುಗಳ ರುಚಿ ನೋಡಿದ ಮೇಲಲ್ಲವೇ?ಹಾಗೆಯೇ ವ್ಯಕ್ತಿಗಳು ಮೇಲೆ ಒಳ್ಳೊಳ್ಳೆ ಬೆಳ್ಳನೆ ಬಟ್ಟೆ ತೊಟ್ಟರೇನು ಅವರ ವ್ಯತ್ಯಾಸ ಗೊತ್ತಾಗುವುದು ಅವರ ಗುಣದಿಂದಲ್ಲವೇ?ನಿಜದ ಭಕ್ತಿ ಇಲ್ಲದೆ ಭಕ್ತನ ವೇಷ ತೊಟ್ಟವರಿದ್ದಾರೆ, ದೇವ ಮಾನವರಂತೆ ವೇಷ ತೊಟ್ಟವರಿದ್ದಾರೆ.
•ಅಜೋ