ನವದೆಹಲಿ: ಫೆಬ್ರವರಿ 5 ರ ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನ ಬಾಕಿ ಇರುವಾಗ, ಎಂಟು ಎಎಪಿ ಶಾಸಕರು ಶನಿವಾರ ಬಿಜೆಪಿ ಸೇರಿದರು.ಭ್ರಷ್ಟಾಚಾರ ಆರೋಪ ಮತ್ತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷದ ಸಿದ್ಧಾಂತದಿಂದ ವಿಮುಖವಾಗಲು ಈ ಎಂಟು ಶಾಸಕರು ಶುಕ್ರವಾರ ಆಮ್ ಆದ್ಮಿ ಪಕ್ಷದ(ಎಎಪಿ) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಇಂದು ಬಿಜೆಪಿ ಸೇರಿದ ಎಲ್ಲಾ ಎಂಟು ಶಾಸಕರಿಗೆ ಈ ಬಾರಿ ಎಎಪಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದೆ. ಹೀಗಾಗಿ ಎಎಪಿ ತೊರೆದು, ಬಿಜೆಪಿ ಸೇರಿದ್ದಾರೆ.
ವಂದನಾ ಗೌರ್ (ಪಾಲಂ), ರೋಹಿತ್ ಮೆಹ್ರೌಲಿಯಾ (ತ್ರಿಲೋಕಪುರಿ), ಗಿರೀಶ್ ಸೋನಿ (ಮದೀಪುರ), ಮದನ್ ಲಾಲ್(ಕಸ್ತೂರ್ಬಾ ನಗರ), ರಾಜೇಶ್ ರಿಷಿ(ಉತ್ತಮ್ ನಗರ), ಬಿ ಎಸ್ ಜೂನ್(ಬಿಜ್ವಾಸನ್), ನರೇಶ್ ಯಾದವ್ (ಮೆಹ್ರೌಲಿ) ಮತ್ತು ಪವನ್ ಶರ್ಮಾ(ಆದರ್ಶ ನಗರ) ಅವರು ಬಿಜೆಪಿ ಸೇರಿದ್ದಾರೆ.
ಮಾಜಿ ಎಎಪಿ ಶಾಸಕ ವಿಜೇಂದರ್ ಗರ್ಗ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಹಲವು ನಾಯಕರು, ದೆಹಲಿ ಬಿಜೆಪಿ ಉಸ್ತುವಾರಿ ಬೈಜಯಂತ್ ಪಾಂಡಾ ಮತ್ತು ರಾಜ್ಯ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಸೇರಿದರು.70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5 ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.